Wednesday, September 30, 2009

ನನಗೊ ನೀನು ಕೃಷ್ಣನ ತೋರುವ ಕಣ್ಣು...!

ಚೆಂದುಳ್ಳಿ ಚೆಲುವೆ,

ನಿನ್ನ ಕೈಗೆ ತಲುಪಿಸಬೇಕು ಎನ್ನುವ ಆಸೆ ಹೊತ್ತು ಬರೆಯುತ್ತಿರುವ ೨೪ನೆಯ ಪತ್ರವಿದು. ಇದುವರೆಗೆ ಬರೆದ ೨೩ ಪತ್ರಗಳು ಆಗಲೇ ಕಸದ ಬುಟ್ಟಿಗೆ ಸೇರಿಯಾಗಿದೆ. ಇದೂ ಅಲ್ಲಿಗೆ ಸೇರದೆ ನಿನ್ನ ಕೈ ಸೇರುವ ಭರವಸೆಯೊಂದಿಗೆ ಈ ಪತ್ರ ಆರಂಭಿಸಿದ್ದೇನೆ.
ಮೊದಲ ಅಕ್ಷರ ಬರೆಯುವ ಹೊತ್ತಿಗೆ ನೀನು ಕಣ್ಣ ಮುಂದೆ ಬಂದಿದ್ದೆ..

ಭಲೆ ಭಲೆ ಚೆಂದದ ಚೆಂದುಳ್ಳಿ ಚೆಲುವೆ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು

ಎಂಥ ಚೆಂದನೆಯ ಸಾಲುಗಳು. ನನ್ನ ಪಾಲಿಗೆ ಈ ಸಾಲುಗಳು ನಿನ್ನ ರೂಪದಲ್ಲಿ ಒದಗಿ ಬಂದು ನಿಜವಾಗಿ ಬಿಟ್ಟಿದೆ.
ಕಾಲೇಜು ಆರಂಭವಾಗಿ ತಿಂಗಳು ನಾಲ್ಕು ಕಳೆದು ಬಿಟ್ಟಿವೆ. ಕ್ಲಾಸು ಶುರುವಾಗಿ ತಿಂಗಳೊಪ್ಪತ್ತಿನಲ್ಲಿಯೇ ಎಲ್ಲರ ಪ್ರತಿಭಾ ಪ್ರದರ್ಶನದ ಕಾಲ. ಅದ್ಯಾವುದೋ ಘಳಿಗೇಲಿ ನೀನು ವೇದಿಕೆ ಏರಿ ಬಿಟ್ಟಿದ್ದೆ. ನಿನ್ನ ಮಧುರ ಕಂಠದಿಂದ ಹೊಮ್ಮಿತ್ತು ಸುಶ್ರಾವ್ಯ ಸಾಲುಗಳು. ಅದಾಗಲೇ ಹೃದಯ ಫುಲ್ ಫಿದಾ. ಆಗಿನಿಂದಲೇ ಕಣ್ಣುಗಳು ನಿನ್ನ ಹುಡುಕಾಟದಲ್ಲಿ ತೊಡಗಿದ್ದವು. ಆದರೆ ನೀನು ಮತ್ತೆ ಕಾಲಿಗೆ ಗೆಜ್ಜೆ ಜೋಡಿಸಿ ಬಂದಿದ್ದೆ.

ಕೃಷ್ಣ ರಾಧೆಯರ ಪ್ರೇಮ ಸನ್ನಿವೇಶವನ್ನು ಬಲು ಸೊಗಸಾಗಿ ಕಣ್ಣಿಗೆ ಕಟ್ಟುವಂತೆ ತೋರಿಸಿದ್ದೆ. ನನ್ನಲ್ಲಾಗಲೇ ನಿನ್ನ ಪಾಲಿನ ಕೃಷ್ಣನಾಗುವ ಕನಸು. ಕ್ಷಣದಲ್ಲೇ ಈ ಹುಡುಗಿ ನನ್ನವಳು ಎಂಬ ಭಾವ. ಆದರೆ ಈ ವಿಷಯವನ್ನು ನಿನ್ನ ಮುಂದೆ ನೇರವಾಗಿ ಹೇಳಲು ಇನ್ನೂ ಕಾಲ ಕೂಡಿ ಬಂದಿಲ್ಲ. ಆದರೆ ಆ ದಿನ ಬರುವಾಗ ಈ ಪತ್ರ ನಿನ್ನ ಕೈ ಸೇರಿರುತ್ತೆ. ಸದ್ಯಕ್ಕಿಷ್ಟು ಸಾಕು ಕಣೇ.

ಚೆಂದುಳ್ಳಿ ಚೆಲುವೆಗೆ ಮನ ಸೋತವ

Tuesday, September 22, 2009

ಆಹಾ ದಸರಾ, ನೀನಿನ್ನೂ ಹತ್ತಿರ..!

ಮುದ್ದು ಗೊಂಬೆಯೇ,
ಈ ಬಾರಿ ನಿನ್ನೂರ ದಸರಾ ವಿಶೇಷ ಏನು? ಮೊನ್ನೆ ಸುಮ್ಮನೆ ಹಳೆಯದನ್ನೆಲ್ಲಾ ಯೋಚಿಸುತ್ತಾ ಕುಳಿತಿದ್ದೆ. ಚೆನ್ನಾಗಿ ನೆನಪಿಸಿ ನೋಡು. ಸರಿಯಾಗಿ ಆರೂವರೆ ವರ್ಷದ ಕೆಳಗೆ ಇಂತಹ ಒಂದು ದಸರಾ ಸಮಯದಲ್ಲೇ ಅರಳಿತ್ತು ನಿನ್ನ ಮೇಲೆ ಪ್ರೇಮಾನುರಾಗ.


ಅಂದು ನಿನ್ನ ಕಣ್ಣಲ್ಲಿ ಕಾತರ, ಆತಂಕ ಎರಡೂ ಮನೆ ಮಾಡಿತ್ತು. ಆದರೆ ಅವುಗಳೆಲ್ಲವನ್ನೂ ಹೃದಯದಲ್ಲಿ ಟಿಸಿಲೊಡೆದ ಭಾವಗಳು ಮೆಟ್ಟಿ ನಿಂತಿದ್ದವು. ಅಂದಿನ ಮುಸ್ಸಂಜೆಯಲ್ಲಿ ನವರಾತ್ರಿಯ ವಿಶೇಷ ಪೂಜೆಗೆಂದು ನಾನು ದೇವಿಯ ಮಂದಿರದಲ್ಲಿದ್ದೆ. ಅದುವರೆಗೆ ನಾವು ಹಾಯ್, ಬೈ ಹೇಳಿದ್ದೆವೇ ಹೊರತು ಅದು ಬಿಟ್ಟು ಎರಡಕ್ಷರ ಮಾತನಾಡಿದವರಲ್ಲ.


ಆದರೆ, ಅಂದು ದೇವಸ್ಥಾನದ ಪೂಜಾರಿ ಆರತಿ ತಟ್ಟೆ ಹಿಡಿದು ನಿನ್ನ ಮುಂದೆ ನಿಂತ ನೋಡು. ನಿನ್ನ ಕಣ್ಣ ತುಂಬಾ ಆರತಿಯ ಬೆಳಕು ಕಾಂತಿಯುತವಾಗಿ ಪ್ರಜ್ವಲಿಸುತ್ತಿತ್ತು. ಆರತಿ ತೆಗೆದು ಕಣ್ಣಿಗೊತ್ತಿಕೊಳ್ಳುವಾಗಲೂ ನಾನು ನಿನ್ನ ಕಣ್ಣುಗಳನ್ನೇ ನೋಡುತ್ತಿದ್ದೆ. ನಿನ್ನಲ್ಲಿ ಅಚಲ ಶ್ರದ್ಧೆಯಿತ್ತು, ಭಕ್ತಿಯಿತ್ತು. ಆದರೆ ನಾನು ವಾಸ್ತವಕ್ಕೆ ಬರುವ ಮೊದಲೇ ನೀನು ನನ್ನ ಕಣ್ಣುಗಳನ್ನು ದಿಟ್ಟಿಸಲಾರಂಭಿಸಿದ್ದೆ. ಮುಖದಲ್ಲಿ ವಯೋಸಹಜವಾದ ಲಜ್ಜೆ ಮನೆ ಮಾಡಿತ್ತು.


ಕಣ್ಣುಗಳಾಗಲೇ ನನ್ನ ಜತೆ ಮಾತಿಗಿಳಿದಿದ್ದವು. ಮನದಲ್ಲಿ ದಸರಾ ದಿನ ಸಿಕ್ಕಿದ ಈ ಗೊಂಬೆ ನನ್ನದು ಅಂದುಕೊಂಡಿದ್ದೆ. ಬಳಿಕ ಕಣ್ಸನ್ನೆಯಲ್ಲೇ ಮಾತು ಆರಂಭಿಸಿದ್ದೆ. ಮರುಕ್ಷಣದಲ್ಲಿ ನಾನು ನೀನು ದೇವಸ್ಥಾನದ ಮುಖ್ಯದ್ವಾರದಲ್ಲಿದ್ದೆವು. ಆ ಮೇಲಿನ ನಮ್ಮ ಪ್ರೀತಿ ಇತರರ ಪಾಲಿಗೆ ಇತಿಹಾಸ.


ಹಾಂ, ಮರೆತೇ ಬಿಟ್ಟಿದ್ದೆ. ಈ ಬಾರಿ ಕೊಟ್ಟ ಮಾತಿನಂತೆಯೇ ಊರಿಗೆ ಬಂದಿದ್ದೀನಿ. ನಾಡಿದ್ದು ದಸರಾ ಮೆರವಣಿಗೆಯಲ್ಲಿ ನಾವಿಬ್ಬರೂ ಸಂಭ್ರಮಿಸಬೇಕು. ಅತ್ತ ಅಂಬಾರಿ ಹೊತ್ತ ಆನೆ ನಡೆಯಬೇಕಾದರೆ ಇತ್ತ ನೀನು ನನ್ನ ತೆಕ್ಕೆ ಸೇರಿರಬೇಕು. ಆ ಗಳಿಗೆ ಎಷ್ಟು ಸುಂದರ ಅಲ್ವೇನೆ?


ಮುದ್ದು ಗೊಂಬೆಯ ಪ್ರೀತಿಸುವವ

Thursday, September 17, 2009

ನಿನ್ನ ತೋಳಲ್ಲಿ ನಾನು ಪ್ರೀತಿಯ ಗುಬ್ಬಿ

ಮೋಹಕ ಕಂಗಳ ಚೆಲುವೆ,

ಮಳೆಗಾಲ ಮುಗಿದರೂ ಇಲ್ಲಿ ವರ್ಷಧಾರೆ ನಿಂತಿಲ್ಲ. ಮೊನ್ನೆ ಧೋ ಎಂದು ಸುರಿದ ಮಳೆಗೆ ನೆನೆದು ಬಂದು ಮನೆಯೊಳಗೆ ಕುಳಿತಿದ್ದೆ ನೋಡು, ಧುತ್ತೆಂದು ಕಾಡಲಾರಂಭಿಸಿತ್ತು ನಿನ್ನ ನೆನಪು.

ಹುಡುಗೀ, ಈ ಮಳೆಗೂ ನನ್ನ ನಿನ್ನ ಪ್ರೀತಿಗೂ ಅದೇನೋ ಅವಿನಾಭಾವ ನಂಟು. ನಮ್ಮಿಬ್ಬರ ಪ್ರೀತಿ ಚಿಗುರಿದ ದಿನ ನೆನಪಿಸಿ ನೋಡು. ಅಂದು ನಾವಿದ್ದಿದ್ದು ನಿನ್ನೂರ ಆ ಗುಡ್ಡದ ಮೇಲೆ. ನನ್ನ ಪ್ರೀತಿಯ ಕರೆಗೆ ನೀನು ಓಗೊಟ್ಟು ಅಂದು ಮಧುರ ಬಾಂಧವ್ಯವೊಂದಕ್ಕೆ ಅಂಕಿತ ಹಾಕಿದ್ದೆ. ಹಾಗೆ ನೀನು ಐ ಲವ್ ಯೂ ಟೂ ಎಂದು ಹೇಳಬೇಕಾದರೆ ಆಗಸದಿಂದ ವರುಣರಾಯ ಮಳೆ ಹನಿಯ ಸಿಂಚನ ಮಾಡಿದ್ದ. ನನ್ನ ಪ್ರೀತಿಯ ಗುಬ್ಬಚ್ಚಿ ಮರಿ ಒದ್ದೆಯಾಗದಿರಲೆಂದು ತೋಳೊಳಗೆ ನಿನ್ನ ಸೇರಿಸಿದ್ದೆ. ಮೊದಲಿನಿಂದಲೂ ಅಷ್ಟೇ. ಮಳೆ ಬಂತೆಂದರೆ ಸಾಕು ನನಗೆ ಬಾಲ್ಯದಿಂದಲೂ ಭಾವನೆಗಳು ಗರಿಗೆದರುವ ಕಾಲ. ಅದು ನಿನಗೂ ಗೊತ್ತಿಲ್ಲದ ವಿಷಯವೇನಲ್ಲ. ಆದರೆ ಅಂತಹ ಎಷ್ಟು ಮಳೆ ದಿನಗಳು ನಮ್ಮಿಬ್ಬರನ್ನು ಭಾವುಕರನ್ನಾಗಿಸಿದವು ಅಲ್ಲವೇನೆ?

ಕಳೆದ ವಾರ ಕೃಷ್ಣಾಷ್ಟಮಿಗೆಂದು ಪೊಡವಿಗೊಡೆಯನ ನಾಡಿಗೆ ಹೋಗಿದ್ದೆ. ನಾವು ಪ್ರತಿ ಭೇಟಿಯಲ್ಲೂ ಕೂರುವ ಜಾಗದಲ್ಲಿ ಹೋಗಿ ಕುಳಿತೆ. ಆಗ ಕಾಡಿತ್ತು ಏಕಾಂಗಿತನ. ಮುಂದಿನ ವಾರ ದಸರಾ. ನೀನು ನನ್ನ ದಸರಾ ಗೊಂಬೆ. ಆ ಗೊಂಬೆಯ ಜತೆ ನಾನು ದಸರಾ ಮೆರವಣಿಗೆಯಲ್ಲಿ ಹೆಜ್ಜೆ ಜೋಡಿಸಬೇಕು. ಕೈ ಕೈ ಬೆಸೆದು ಕೊಂಡು ಒಂದಿಡೀ ದಿನ ನಿನ್ನ ಜತೆ ಸಾಗುತ್ತಾ ನಿನ್ನ ಆ ಮೋಹಕ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಅದರಲ್ಲಿ ನನ್ನ ಪ್ರತಿಬಿಂಬ ನೋಡಬೇಕು. ಹಾಗೆ ನೋಡುತ್ತಾ ನೋಡುತ್ತಾ ನಾನು ನಿನ್ನಲ್ಲಿ ಕಳೆದು ಹೋಗಬೇಕು. ಸಿದ್ಧಳಾಗಿರು.

ಮೋಹಕ ಕಂಗಳಿಗೆ ಸೋತು ಹೋದವ