Thursday, August 13, 2009

ಕೃಷ್ಣನ ಕೊಳಲಿನ ಪ್ರೇಮದಾ ಕರೆ...

ಕಾದಿರುವಳೋ ಕೃಷ್ಣ ರಾಧೆ,
ಕಾದಿರುವಳೋ ಕೃಷ್ಣ ರಾಧೆ
ಬೃಂದಾವನದ ನಂದನವನದಲ್ಲಿ,
ಬೃಂದಾವನದ ನಂದನವನದಲ್ಲಿ
ಕಾದಿರುವಳೋ ಕೃಷ್ಣ ರಾಧೆ

ನಾಳೆ ಕೃಷ್ಣಾಷ್ಟಮಿ ಸಂಭ್ರಮ. ನಿನಗಿದೆಲ್ಲಾ ಗೊತ್ತಾ ಎಂಬ ಅಸಂಬದ್ಧ ಪ್ರಲಾಪ ಬೇಡ. ಜೀನ್ಸ್ ಪ್ಯಾಂಟ್, ಅದರ ಮೇಲೊಂದು ಟೀಶರ್ಟ್, ಕಣ್ಣಿಗೊಂದು ಸನ್‌ಗ್ಲಾಸ್ ಹಾಕಿದ್ದಾಳೆ ಎಂದಾಕ್ಷಣ ಹುಡುಗಿ ಮಾಡರ್ನ್, ಅವಳಿಗೇನೂ ಗೊತ್ತಿರೋಲ್ಲ ಅಂತಲ್ಲ ಗುಡ್ಡೂ. ಹಾಗಂತ ಒಂದು ಅಲಿಖಿತ ಶಾಸನ ಇದ್ದಿದ್ದರೆ ನನ್ನ ನಿನ್ನ ಮೊದಲ ಭೇಟಿ ಕೃಷ್ಣ ಮಂದಿರದಲ್ಲಿ ಆದ ದಿನವೇ ನಾ ನಿನ್ನವಳಾಗುತ್ತಿರಲಿಲ್ಲ.

ಕಳೆದ ವರ್ಷ ಮನೆಯವರನ್ನು ಬಿಟ್ಟು ಆಚರಿಸಿದ ಮೊದಲ ಅಷ್ಟಮಿ. ಪ್ರತಿ ವರ್ಷವೂ ಕೃಷ್ಣಾಷ್ಟಮಿಗೆ ದೇವರ ದರ್ಶನ ಕಡ್ಡಾಯ. ಆದರೆ ಅಪ್ಪ ಅಮ್ಮನನ್ನ ದೂರ ಬಿಟ್ಟು ಈ ಕಾಲೇಜಿಗೆ ಸೇರಿಯಾಗಿತ್ತು. ದೇವರ ದರ್ಶನ ಮಾಡಲೇಬೇಕೆಂದು ನಿನ್ನೂರ ಮಂದಿರಕ್ಕೆ ಬಂದಿದ್ದೆ ನೋಡು.

ದೇವರಿಗೆ ಪ್ರಾರ್ಥಿಸಿ ಕೈ ಜೋಡಿಸಿ ಇನ್ನೇನು ಆರತಿಯನ್ನು ಕಣ್ಣಿಗೊತ್ತಿಕೊಳ್ಳಬೇಕು ಎಂಬಷ್ಟರಲ್ಲಿ ಎಲ್ಲರ ನಡುವಿನಿಂದ ಎರಡು ಕಣ್ಣುಗಳು ನನ್ನನ್ನು ಹಿಂಬಾಲಿಸುತ್ತಿವೆ ಅಂತ ಗೊತ್ತಾಗಿತ್ತು. ಆಗಲೇ ಹೃದಯದಲ್ಲಿ ಡವ ಡವ. ಆದರೆ ಮನ ಕೃಷ್ಣನಿದ್ದಾನೆ ನಿನ್ನ ಜತೆ ಅಂದಿತ್ತು.

ನನ್ನ ರಾಧೆ ನೀನಾಗುವೆಯಾ ಎಂದು ದೂರದಿಂದ ಕೇಳಿದಂತಾಯ್ತು. ನಾನು ಸುಮ್ಮನೆ ತಲೆಯಾಡಿಸಿದೆ. ನಿನ್ನೆಗೆ ರಾಧೆಯ ಗೆದ್ದ ಸಂಭ್ರಮ. ನಾನು ಹೊರಡಬೇಕೆಂದರೂ ಹೊರಡಲಾಗದಷ್ಟು ಆಪ್ತವಾಗಿದ್ದೆ ನೀನು. ನಿನ್ನ ಸಾಮೀಪ್ಯ, ಸಾಂಗತ್ಯವೇ ನವಿರು ಅನುಭವ ನೀಡಲಾರಂಭಿಸಿತ್ತು. ಮನದಲ್ಲಿ ಏನೋ ಕಂಪನ.

ಕೃಷ್ಣಾಷ್ಟಮಿಗೆ ಈ ಬಾರಿ ಮನೆಯಲ್ಲಿದ್ದೇನೆ. ಮನೆಯಲ್ಲಿದ್ದರೆ ಅಷ್ಟಮಿಗೆ ಮದರಂಗಿ ಹಾಕುವುದೇ ಸಂಭ್ರಮ. ಹಾಗೆ ಕೈಯಲ್ಲಿ ಚಿತ್ತಾರ ಮೂಡುತ್ತಿರಬೇಕಾದರೆ ಮನದಲ್ಲಿ ಮತ್ತೆ ನಿನ್ನದೇ ಸವಿ ನೆನಪು. ಈ ಬಾರಿ ಮದರಂಗಿ ರಂಗೇರಬೇಕಾದರೆ ನೀನು ಕಣ್ಣ ಮುಂದಿರಬೇಕು, ಪ್ಲೀಸ್!
ನಿನ್ನ ಕೃಷ್ಣಪ್ರಿಯೆ

No comments: