Wednesday, April 8, 2009

ಪತ್ರದ ಕಡೆಯ ಸಾಲುಗಳನ್ನು ಓದದೇ ಬಿಟ್ಟಿದ್ದಿದ್ದರೆ..

ಠೋರ ಹೃದಯಿಯೇ ಕೊನೆಗೂ ನನ್ನ ಮನ ನೋಯಿಸಬೇಕು ಎಂಬ ನಿನ್ನಾಸೆ ಈಡೇರಿತಲ್ಲಾ ಈಗ ಖುಷಿಯಾಯಿತಾ?
ಮೊನ್ನೆ ನೀ ಬರೆದ ಪತ್ರ ಓದುತ್ತಿದ್ದಂತೆ ಕಣ್ಣಲ್ಲಿ ನೀರು, ಹೃದಯದಲ್ಲಿ ನೋವಿನ ಕನಲಿಕೆ ಆರಂಭವಾಗಿತ್ತು.

ಅಷ್ಟಕ್ಕೂ ಮನ ನೋಯಿಸಬೇಕೆಂದು ಇದ್ದರೆ ಅದನ್ನು ಮುಖತಃ ಕುಳಿತು ಮಾಡು, ಆಗ ಹೃದಯ ಇಷ್ಟು ತೀವ್ರವಾಗಿ ಘಾಸಿಗೊಳ್ಳುವುದಿಲ್ಲ ಕಣೋ. ಅದು ಬಿಟ್ಟು ಇಂಥಾ ಚೇಷ್ಟೆಗಳನ್ನೆಲ್ಲಾ ಮಾಡಿದರೆ ಸಹಿಸಲು ಆಗುವುದಿಲ್ಲ.

ಏಪ್ರಿಲ್ ಫೂಲ್ ಹೆಸರಲ್ಲಿ ಇಂಥ ಪತ್ರ ಬರೆದು ನೀನು ಸಖತ್ ಮಜಾ ತೆಗೆದುಕೊಂಡೆ ಅಲ್ವಾ. ಆದರೆ ನೀನೇ ಪ್ರಾಣ ಎನ್ನುವ ಈ ಪುಟ್ಟ ಹೃದಯಕ್ಕೆ ಎಷ್ಟು ದಿಗಿಲಾಗಿತ್ತು ಗೊತ್ತಾ? ಪತ್ರದ ಕೊನೆಯ ಸಾಲು ಓದದೇ ಇದ್ದಿದ್ದರೆ ನಿನ್ನಾಣೆ ನಾ....

ಬೇಡ ಬಿಡು, ಈಗ ಅದರ ನೆನಪುಗಳ್ಯಾಕೆ. ಮತ್ತೆ ಹ್ಯಾಗಿದೀಯಾ? ಇನ್ನೊಂದು ಪರೀಕ್ಷೆ ಮುಗಿದರೆ ಆಯ್ತು. ಮತ್ತೆರಡು ತಿಂಗಳು ಓದಿನ ಜಂಜಾಟಗಳಿರಲ್ಲ. ಮತ್ತೆ ಏನಿದ್ದರೂ ನಿನ್ನ ನೆನಪುಗಳ ಜತೆ ಪಯಣ. ಅಲ್ಲಿ ನೀ ಮುಡಿಸಿದ ಮೊಳ ಉದ್ದದ ಜಾಜಿ ಮಲ್ಲಿಗೆ. ಅದರ ನಡುವೆ ಒಂದು ಚೆಂಗುಲಾಬಿ, ಮೂಗಲ್ಲಿ ಹೊಳೆಯುವ ಮೂಗುತಿ. ಇದನ್ನೆಲ್ಲಾ ನೋಡಿ ನೀ ಕೇಳಬೇಕು ಏನೇ ವಯ್ಯಾರದ ಗೊಂಬೆ ಮರೀ ಅಂತ.

ಆ ಕ್ಷಣದ ನಿರೀಕ್ಷೆಯಲ್ಲಿ ನಾನಿರ್ತೀನಿ. ನಾಡಿದ್ದು ಶುಕ್ರವಾರ ಪರೀಕ್ಷೆ ಮುಗಿಯುತ್ತೆ. ಈಗ ಪರೀಕ್ಷೆನೆಪದಲ್ಲಿ ಫೋನ್ ಮಾಡದೇ ಕುಳಿತಿದ್ದೀಯಲ್ಲಾ. ಅದನ್ನು ಬಡ್ಡಿ ಸಮೇತ ಪರೀಕ್ಷೆ ಮುಗಿದ ನಂತರ ತೀರಿಸಬೇಕು. ಅಲ್ಲಿ ಹಗಲು ರಾತ್ರಿಯ ಪರಿವೆಯೇ ನಮ್ಮ ಪಾಲಿಗೆ ಇರುವುದಿಲ್ಲ.

ಅಂದ ಹಾಗೆ ಮುಂದಿನ ತಿಂಗಳು ನಿನ್ನ ಊರಿಗೆ ಬರುತ್ತಾ ಇದ್ದೀನಿ. ಸದ್ಯಕ್ಕೆ ನೀನು ಸಂಭ್ರಮಪಟ್ಟುಕೊಳ್ಳಲು ಇಷ್ಟು ಸಾಕು. ಮೂರ್ಖಳನ್ನು ಮಾಡಿದ ಮೂರ್ಖ ಹುಡುಗನ ಪ್ರೀತಿಯಲ್ಲಿರುವ..

ನಿನ್ನ ಕನಸು ಕಾಣುವ ಹುಡುಗಿ

No comments: