Tuesday, April 28, 2009

ಬಂಗಾರದೊಡವೆ ಬೇಕು.. ಅದ.. ನೀ ತಂದುಕೊಡಬೇಕು..

ಬಂಗಾರೂ,
ಐ ಲವ್ ಯೂ ಸೋ ಮಚ್. ಈ ಸಂಭ್ರಮದಲ್ಲಿ ನೀನು ಏನು ಕೇಳುವಿಯೋ ಅದನ್ನು ಕೊಡಲು ನಾನು ಸೈ. ಯಾಕೆಂದು ಕೇಳ ಬೇಡ. ಕೊನೆಗೂ ಅಕ್ಷಯ ತೃತೀಯದ ದಿನವೇ ಬೆರಳಿಗೆ ಉಂಗುರ, ಕೊರಳಿಗೆ ಸರ ತೆಗಸಿಕೊಟ್ಟೆಯಲ್ಲಾ ಸಾಕು ಕಣೋ.

ನಾನು ಚಿನ್ನದ ಬೇಡಿಕೆಯಿಟ್ಟಾಗ ಎಷ್ಟು ಹೆದರಿದ್ದೆ ಗೊತ್ತಾ. ನೀನು ಕೋಪಿಸಿದರೆ ರಮಿಸೋದು ಹೇಗೆಂದು ಯೋಚಿಸುತ್ತಾ ನಿನ್ನ ಮುಂದೆ ಬೇಡಿಕೆಯಿಟ್ಟಿದ್ದೆ. ನಿಂಗೊತ್ತಾ ಹುಡುಗಾ ಹೀಗೆ ಅಕ್ಷಯ ತೃತೀಯಾ ದಿನ ಬಂಗಾರ ಖರೀದಿಸಿ ನಾನೀಗ ಅಕ್ಷರಶಃ ‘ಚಿನ್ನದ ಹುಡುಗಿ’ಯೇ ಆಗಿಬಿಟ್ಟಿದ್ದೇನೆ.

ಕಳೆದ ಬಾರಿಯ ಸಂಭ್ರಮಕ್ಕೆ ಕಿವಿಯಲ್ಲಿ ಎರಡು ಆಭರಣ ಸಾಲದು ಎಂಬಂತೆ ಮತ್ತೆ ಎರಡು ತೂತು ತೆಗೆಸಿ ಆಭರಣ ಹಾಕಿಸಿದ್ದೆ ಗೊತ್ತಾ. ಅಮ್ಮ ಬೈದಳು, ಆದರೆ ಅವಳಿಗೆ ಎಲ್ಲಿ ಗೊತ್ತಾಗುತ್ತೆ ನನ್ನ ಚಿನ್ನದ ಪ್ರೇಮ.

ಅದಕ್ಕಿಂತ ಹಿಂದಿನ ವರ್ಷ ಅಮ್ಮನಿಗೆ ಗೊತ್ತಾಗದೆ ಎರಡು ಕಾಲುಂಗುರ ಖರೀದಿಸಿ ಅದನ್ನು ಧರಿಸಿ ಅಮ್ಮನ ಮುಂದೆ ಹೋಗಿ ವಯ್ಯಾರದಿಂದ ಹೇಗಿದೆಯಮ್ಮಾ ಎಂದು ಕೇಳಿದಾಗ, ಮದುವೆಗೆ ಮುಂಚೆ ಕಾಲುಂಗುರ ತೊಟ್ಟಿದ್ದಕ್ಕೆ ಅಮ್ಮ ಲಕ್ಷ ನಾಮಾರ್ಚನೆ ಮಾಡಿ ಬಾಯಿ ಮುಚ್ಚಿಸಿದ್ದಳು.

ಬಾಲ್ಯದಿಂದಲೂ ನನಗೆ ಚಿನ್ನದ ಮೇಲೆ ವಿಪರೀತ ಪ್ರೀತಿ. ಹುಟ್ಟಿ ವರ್ಷ ಕಳೆಯುವುದರೊಳಗಾಗಿ ಅಜ್ಜ ಸೊಂಟಕ್ಕೆ ಚಿನ್ನದ ಉಡಿದಾರ ತೊಡಿಸಿದ್ದ. ಎರಡನೇ ವರ್ಷಕ್ಕೆ ಅಪ್ಪ ಕೊರಳಿಗೆ ಹಾರ ಕರುಣಿಸಿದ್ದ. ಪ್ರತಿ ವರ್ಷದ ಸಂಭ್ರಮದಲ್ಲಿ ಅಪ್ಪ ಅಮ್ಮ ಇಬ್ಬರೂ ಸೇರಿ ನೀಡುತ್ತಿದ್ದ ಆಭರಣಗಳು ಇಂದಿಗೂ ಅಲಮಾರಿಯಲ್ಲಿ ಭದ್ರ.

ನನಗೊತ್ತು ಎಲ್ಲರೂ ನನ್ನ ಮೇಲೆ ತೋರುವ ಪ್ರೀತಿ ಕಂಡು ನಿನ್ನಲ್ಲಿ ಅಸೂಯೆ ಮೂಡುತ್ತೆ. ಅದಕ್ಕೇ ಕಳೆದ ವಾರದಿಂದಲೇ ನಿನ್ನ ಬೆನ್ನಿಗೆ ದುಂಬಾಲು ಬಿದ್ದಿದ್ದು ನೀನೇನಾದರೂ ಕರುಣಿಸು ದೊರೆಯೇ ಎಂದು.

ಹೃದಯದ ದೊರೆಯೇ ಇನ್ನೇನೂ ನಿನ್ನಲ್ಲಿ ಕೇಳಲ್ಲ, ಯಾವ ಆಭರಣವೂ ಬೇಡ. ನಿನಗೆ ನಿರಾಭರಣವೇ ಸುಂದರ ಎನಿಸುವುದಾದರೆ ಅದೇ ಸಾಕು. ಇನ್ನು ಕಾಡುವುದಿಲ್ಲ, ಬೇಡುವುದೂ ಇಲ್ಲ. ಆದರೆ ಕೊನೆಗೊಂದು ಆಸೆ ಇನ್ನೂ ಉಳಿದಿದೆ. ಸಿಕ್ಕಾಗ ಹೇಳುತ್ತೇನೆ.. ಬರುತ್ತೀಯಾ?

ನಿನ್ನ ಬಂಗಾರಿ

No comments: