Tuesday, August 18, 2009

ಕತ್ತಂಚಿನ ಮಚ್ಚೆಗೆ ಮುತ್ತಿಟ್ಟವನು ನೀನಾ?

ನಿನ್ನೆ ರಾತ್ರಿ ಕನಸಲ್ಲಿ ಬಂದು ಕಾಡಿದವನು ನೀನೇನಾ? ಕತ್ತಿನ ಅಂಚಿನಲ್ಲಿರುವ ಮಚ್ಚೆಗೆ ಮುತ್ತು ನೀಡಿದವನು ನೀನೇನಾ? ಒಂದೂ ತಿಳಿಯುತ್ತಿಲ್ಲ ದೊರೆಯೇ. ಕನಸಾದರೂ ಮನಕೆ ಮುದ ನೀಡಿ ಮಧುರ ಭಾವಗಳನ್ನೆಬ್ಬಿಸಿದ್ದು ಮಾತ್ರ ಸುಳ್ಳಲ್ಲ.

ಎಂದಿನಂತೆ ಮೊನ್ನೆ ರಾತ್ರಿ ನಿನಗೆ ಗುಡ್ ನೈಟ್ ಹೇಳಿ ಮಲಗಿದ್ದೆ ನೋಡು. ಅದ್ಯಾವುದೋ ಅಪೂರ್ವ ಗಳಿಗೇಲಿ ನೀನು ನನ್ನ ಕನಸಿನರಮನೆಗೆ ಬಂದಿಳಿದಿದ್ದೆ. ಅದೆಲ್ಲಿಂದಲೋ ಹುಚ್ಚು ಧೈರ್ಯ ಬಂದಿತ್ತು. ನಾನು ನಿನ್ನ ತೆಕ್ಕೆ ಸೇರಿದ್ದ ಸಂಭ್ರಮದಲ್ಲಿ ನಿನ್ನ ಕೈಬೆರಳುಗಳಲ್ಲಿ ತುಂಟತನ ಲಾಸ್ಯವಾಡಲಾರಂಭಿಸಿತ್ತು.

ಕ್ಷಣ ಮಾತ್ರದಲ್ಲಿ ನಾನು ಬೆದರು ಗೊಂಬೆ. ಕಾಲ್ಬೆರಳು ಅದಾಗಲೇ ನೆಲದ ಜತೆ ಚಕ್ಕಂದವಾಡಲಾರಂಭಿಸಿತ್ತು. ಹಾಗೆ ನಿದ್ದೆಗಣ್ಣಲ್ಲೇ ನಾನು ನಿನ್ನ ಜತೆ ಮಾತಿಗೆ ತೊಡಗಿದ್ದೆ ನೋಡು. ಏನೋ ಕೇಳಬೇಕೆನ್ನುವಷ್ಟರಲ್ಲಿ ಅಮ್ಮ ಬಂದು ಎಚ್ಚರಿಸಿದಳು ನೋಡು. ಆಗಲೇ ಗೊತ್ತಾಗಿದ್ದು ಕಂಡಿದ್ದೆಲ್ಲವೂ ಕನಸು.

ಅವಳಾಗಲೇ ಏನೇ ಇನ್ನೂ ಶ್ರಾವಣ ಮುಗಿದಿಲ್ಲ. ಆಗಲೇ ಕನಸಿನರಮನೆ ಕಟ್ತಾ ಇದ್ದೀಯಾ. ನಿನ್ನ ರಾಜಕುಮಾರ ಬಂದು ನಿನ್ನ ಕೈ ಹಿಡಿಯಲು ಇನ್ನೂ ಸುಮಾರು ದಿನಗಳಿವೆ ಅಂದ್ಬಿಟ್ಳು ನೋಡು. ಯಾಕೋ ದುಃಖ ತಡೆಯಲಾಗಲಿಲ್ಲ ಕಣೋ. ಅಮ್ಮನಿಗೆ ಗೊತ್ತಾಗದಂತೆ ಕಣ್ಣಂಚಲ್ಲಿ ಬಂದು ಸೇರಿದ್ದ ಕಣ್ಣೀರ ಬಿಂದುವನ್ನು ಕೈಗೊತ್ತಿಕೊಂಡೆ. ಅದ್ಯಾಕೋ ಮತ್ತೆ ಮನದಲ್ಲಿ ನೆನಪುಗಳ ಸರಮಾಲೆ.

ನೀನು ಕದ್ದಾಲಿಸಿದ ಕೈ ಬಳೆಗಳ ಸದ್ದು, ನೀನೇ ಕೈಯಾರೆ ಕಾಲಿಗೆ ತೊಡಿಸಿದ ಗೆಜ್ಜೆ. ಕಳೆದ ವಾರವಷ್ಟೇ ಮೂಗೇರಿಸಿಕೊಂಡ ಮೂಗುತಿ. ಬರ್ತ್‌ಡೇ ಗಿಫ್ಟ್ ಡೈಮಂಡ್ ರಿಂಗ್. ಎಲ್ಲವನ್ನೂ ನೋಡುತ್ತಾ ನಾನು ಕಳೆದುಹೋಗುತ್ತೇನೆ. ದೂರದಲ್ಲೆಲ್ಲೋ ಆಗಸದಲ್ಲಿ ಹಕ್ಕಿಗಳ ಹಿಂಡು ಹಾರಾಡುತಿದ್ದರೆ ಮನದಲ್ಲಿ ನನಗೂ ಗರಿ ಬಿಚ್ಚುವಾಸೆ. ಆದರೆ ಜತೆಯಲಿ ನೀನಿರಬೇಕು ಎನ್ನುವುದು ಮಾತ್ರ ಮರೆಯದಿರು.

ನಾಡಿದ್ದು ಚೌತಿ ಸಂಭ್ರಮ. ಊರಿಗೆ ಏನಾದರೂ ಬರೋದಿದೆಯಾ ದೊರೆಯೇ? ನೀ ಬರುವೆ ಎಂಬ ನಿರೀಕ್ಷೆಯಲ್ಲಿ...
ನಿನ್ನವಳು

3 comments:

ಧರಿತ್ರಿ said...

ಚೆನ್ನಾಗಿದೆ ಓಲೆ...
-ಧರಿತ್ರಿ

minugutaare said...

thank you

ranjith said...

chennagide patra... bareyuttiri


-ranjith
http://neelihoovu.wordpress.com/