Wednesday, August 15, 2007

ಕಡಲ ತಡಿಯ ಕನಸು ಬೇಗ ನನಸಾದ ಹಾಗೆ ಕನಸೊಂದು ಕಂಡೆ!


ಸುಶೀ
ಅಬ್ಬಾ ಅಂತೂ ಈ ಮಳೆಗಾಲದಲ್ಲೇ ಊರಿಗೆ ಬಂದ್ಯಲ್ಲಾ. ಧರೆಗೆ ಮಳೆ ತಂಪೆರೆದಂತೆ ಮನದ ದುಗುಡ ದೂರಮಾಡಲು ಊರಿಗೆ ಬಂದ ನೀನೇ ಗ್ರೇಟ್ ಕಣೋ. ಯಾಕೋ ಮೊನ್ನೆ ಮಳೆಯ ಆರ್ಭಟ, ಕಡಲಿನ ಕೊರೆತ, ಮನೆಯನ್ನು ಸುತ್ತುವರಿದ ನೀರನ್ನು ನೋಡುತ್ತಿದ್ದಂತೆ ಹೃದಯದಲ್ಲಿ ಏನೋ ತುಡಿತ. ಮಳೆಯ ಆಗಮನಕ್ಕೆ ಮುನ್ನ ಕವಿಯುವ ಕಾರ್ಮೋಡಗಳೆಂದರೆ ನನಗೀಗಲೂ ತುಂಬಾ ಭಯ ಕಣೋ. ಬಾಲ್ಯದಿಂದಲೂ ಹಾಗೇನೇ. ಕಾರ್ಮೋಡದ ಛಾಯೆಗಳಂತೆಯೇ ನನ್ನ ಮನಸಿಗೂ ಭವಿತವ್ಯದ ಕನಸುಗಳು ಕಾಡಲಾರಂಭಿಸುತ್ತವೆ. ಜತೆಗೆ ಒಂದಿಷ್ಟು ಭಯ, ತುಸು ನಾಚಿಕೆ ಎಲ್ಲವೂ ತನ್ನಿಂತಾನೇ ಸೃಷ್ಟಿಯಾಗಿ ಕಣ್ಣ ಮುಂದೆ ನಿನ್ನ ರೂಪ ಸೃಷ್ಟಿಯಾಗುತ್ತದೆ.

ಯಾಕೋ ಕಾಣೆ ಮನಸು ಮೊದಲಿನಿಂದಲೂ ಈ ಮಳೆಯ ಹಾಗೆ, ಒಂದು ಸಲ ಹನಿ ಹನಿಯಾಗಿ ಬಂದರೆ, ಇನ್ನೊಂದು ಸಲ ಧೋ... ಎಂಬ ಭೋರ್ಗರೆತದೊಂದಿಗೆ ನಿನ್ನ ನೆನಪುಗಳನ್ನು ತಂದು ಕೊಡುತ್ತದೆ.

ಮೊನ್ನೆ ಅತ್ತೆ ಮನೆ ಪಕ್ಕದ ಬೀಚಿಗೆ ಹೋಗಿದ್ದೆ. ಕಡಲಿನ ಅಲೆ, ಶಾಂತ ಸಮುದ್ರದ ರೌದ್ರಾವತಾರ ನೋಡುತ್ತಿದ್ದಂತೆ ಮನದೊಳಗೆ ಸುಖ್ ದುಃಖ್ ಕೇ ಜುಗಲ್‌ಬಂದಿ ಶುರು. ಕಡಲ ತಡಿಯ ಮರಳಿನಲ್ಲಿ ನಿನ್ನ ಹೆಸರು ಬರೆಯುತ್ತಿದ್ದಂತೆ ಅದನ್ನು ಮಾಸಲು ಬರುವ ಅಲೆ ನೋಡುವಾಗಲೂ ನಿನ್ನದೇ ಚಿಂತೆ. ನೀನೂ ನನ್ನನ್ನು ಬರಸೆಳೆದು ಅಪ್ಪಿಕೊಳ್ಳಲು ಬಂದಂತೆ ಕನಸುಗಳು ಕಾಡ್ತಾ ಇವೆ. ಮೊನ್ನೆ ನೀನು ಬಂದ ವಿಷಯ ತಿಳಿಯುತ್ತಿದ್ದಂತೆ ಕಡಲ ತಡಿಯಲಿ ಕಂಡ ಕನಸು ಬೇಗ ನನಸಾಗ್ತಾ ಇದೆಯೇನೋ ಎಂಬ ಸಂಭ್ರಮ.

ಹೆಚ್ಚು ದಿನ ಕಾಯಿಸಬೇಡ. ಕಾಲೇಜಿನಲ್ಲಿ ಪಾಠ ಕೇಳ್ತಾ ಇದ್ದರೂ ಅಲ್ಲಿನ ಪುಸ್ತಕಗಳಲ್ಲಿ ನೋಟ್‌ಬುಕ್‌ಗಳಲ್ಲಿ ಬಂದು ಕಾಡ್ತಾ ಇದೀಯಾ. ಇನ್ನು ಈ ರೀತಿ ಬೇಡ, ಮನೆಗೆ ಬಂದು ಹಿರಿಯರಲ್ಲಿ ಮಾತನಾಡಿ ನಮ್ಮ ಸಂಬಂಧವನ್ನು ಗಟ್ಟಿಗೊಳಿಸೋಕೆ ಬೇಗನೆ ಬಾ.

ಈ ಮಳೆಗಾಲಕ್ಕೂ ಮುನ್ನ ಮದುವೆ ಬಗ್ಗೆ ಮಾತನಾಡದಿರೆ ನಾವಿಬ್ಬರೂ ನಂಬಿದ ಉಡುಪಿ ಕೃಷ್ಣನ ಮೇಲಾಣೆ!

ನಿನ್ನ ಚೈತೂ.

No comments: