Wednesday, August 15, 2007

ನಿನ್ನಿಂದ ಎಲ್ಲಾ ಬದಲಾಗಿದೆ...

ಅರಗಿಣಿ,

ಎಲ್ಲಿ ಮರೆಯಾಗಿ ಹೋದೆ. ಪ್ರತಿದಿನ ಕಾಲೇಜಿಗೆ ಬರುತ್ತಾ ಕ್ಲಾಸಿಗೆ ಕಾಲಿರಿಸುವ ಮುನ್ನವೇ ಹಾಯ್ ಎನ್ನುವ ನೀನು ಕಳೆದ ವಾರದಿಂದ ಪತ್ತೇನೇ ಇಲ್ಲ. ಎಲ್ಲಿದ್ದೀಯಾ?

ಹತ್ತಿರ ಇರುವಷ್ಟು ದಿನ ನಿರ್ಲಕ್ಷ್ಯದಿಂದ ಕಾಣುವ ವಸ್ತು ನಮ್ಮಿಂದ ದೂರಾದಾಗ ಅದಕ್ಕಾಗಿ ಚಡಪಡಿಸುತ್ತದೆ ಮನಸು. ನನ್ನ ಪರಿಸ್ಥಿತಿ ಹಾಗೇ ಆಗಿದೆ.

ನೀನು ಪರಿಚಯವಾದ ಕೆಲವೇ ದಿನಗಳಲ್ಲಿ ಜೀವನದ ಶಿಸ್ತಿನ ಸಿಪಾಯಿ ಆಗಿದ್ದೀನಿ. ಅದಕ್ಕೆ ನೀನೇ ಕಾರಣ. ಆಗ ಕೇವಲ ಗೆಳತಿಯಾಗಿ ಈ ಮಾತುಗಳನ್ನು ಹೇಳುತ್ತಿದ್ದೀ ಅಂದುಕೊಂಡಿದ್ದೆ. ಅದಕ್ಕೆ ಪ್ರೀತಿಯ ರೂಪವಿದೆ ಎಂದು ತಿಳಿಯಲೂ ತಿಂಗಳುಗಳ ಕಾಲ ಕಷ್ಟ ಪಟ್ಟ ಶತಪೆದ್ದ ನಾನು!

ಪ್ರತಿದಿನ ಅದೇ ಮಣ್ಣಿನ ರಸ್ತೆಯಲ್ಲಿ ನಡೆಯುತ್ತಾ ಕೈಗೆ ಕೈಗೆ ಸೇರಿಸಿ ನಮ್ಮ ಕನಸುಗಳನ್ನು ಕಟ್ಟಿ ಭವಿತವ್ಯದ ಬಗ್ಗೆ ಗರಿಬಿಚ್ಚಿದವರು ನಾವು. ಎಷ್ಟು ಸುಂದರ ದಿನಗಳವು. ಪ್ರತಿದಿನ ಅದೇ ಹಾದಿಯಲ್ಲಿ ತೆರಳಿದ ಕಾರಣ ಎಲ್ಲರಿಗೂ ಪರಿಚಯದವರು ನಾವು. ನಮ್ಮನ್ನು ದೂರದಿಂದ ನೋಡಿಯೇ ಪಿಸುಗುಟ್ಟುವವರು ಹಲವರು. ಈಗ ಕೆಲವು ದಿನಗಳಿಂದ ನೀನು ಜತೆಗಿಲ್ಲ ಎನ್ನುವ ನೋವಿನ ಜತೆಗೆ ಹೊರಗಿನವರ ಗುಸುಗುಸು ಬೇರೆ.

ಈ ಒಂದು ವರ್ಷದಲ್ಲಿ ನಿನ್ನಿಂದಾಗಿ ಎಷ್ಟೊಂದು ಬದಲಾವಣೆ. ಎಲ್ಲದರ ಮೇಲೆ ನಂಬಿಕೆಯನ್ನೇ ಕಳೆದುಕೊಂಡ ನನ್ನಲ್ಲಿ ನಂಬಿಕೆ ಬೀಜವನ್ನು ಬಿತ್ತಿ ಪ್ರೀತಿಯ ಅಮೃತಸಿಂಚನ ಮಾಡಿದವಳು ನೀನು. ನಿನ್ನ ನಡೆ ನುಡಿ, ಮುನಿಸು, ತುಂಟತನ ಎಲ್ಲವನ್ನೂ ಒಂದು ವಾರದಿಂದ ಮಿಸ್ ಮಾಡ್ಕೊಳ್ತಾ ಇದ್ದೀನಿ ಕಣೇ ಯಾವಾಗ ಬರ್‍ತೀಯಾ ಮತ್ತೆ ಕಾಲೇಜಿಗೆ.

ನಿನಗಾಗಿ ಕಾಯ್ತಾ ಇರುವ,
ಮನಸು.

No comments: